Monday 29 March 2021

ನಾಗರಿಕ ಸೇವಾ

 ನಾಗರಿಕ ಸೇವಾ

ಕನರ್ಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)ನಿಯಮಗಳು 1957.
- ಕೆ.ಎಸ್.ರವಿಶಂಕರ

ಶಿಸ್ತುಪ್ರಾಧಿಕಾರಿಯು ವಿಚಾರಣಾಧಿಕಾರಿಗಳನ್ನು ನೇಮಿಸಿದಲ್ಲಿ, ವಿಚಾರಣಾ ಧಿಕಾರಿಗೆ ದೋಷಾರೋಪಣಾ ಪಟ್ಟಿಯ (ನೋಟೀಸ್ ಹಾಗೂ ಅನುಬಂಧ 1 ರಿಂದ 4) ಪ್ರತಿ, ದೋಷಾರೋಪಣಾ ಪಟ್ಟಿಗೆ ಆರೋಪಿ ನೌಕರರ ಲಿಖಿತ ಹೇಳಿಕೆ ಪ್ರತಿ, ಪ್ರಕರಣದಲ್ಲಿ ಸಾಕ್ಷಿಗಳ ಹೇಳಿಕೆಗಳಿದ್ದಲ್ಲಿ ಅವರ ಹೇಳಿಕೆಯ ಪ್ರತಿಗಳು, ದೋಷಾರೋಪಣಾ ಪಟ್ಟಿಯ ಅನುಬಂಧ-3 ರಲ್ಲಿ ಪ್ರಸ್ತಾಪಿಸಿದ ದಾಖಲೆಗಳ ಪ್ರತಿಗಳು, ಇವುಗಳನ್ನು ತ್ರಿಪ್ರತಿಯಲ್ಲಿ ನೀಡಬೇಕು (ವಿಚಾರಣಾಧಿಕಾರಿಗೆ 1 ಪ್ರತಿ, ಆರೋಪಿ ನೌಕರನಿಗೆ ಒಂದು ಪ್ರತಿ ಹಾಗೂ ಪ್ರೆಸೆಂಟಿಗ್ ಅಧಿಕಾರಿಗೆ ಒಂದು ಪ್ರತಿ). ವಿಚಾರಣಾಧಿಕಾರಿಗಳು ಆರೋಪಿ ನೌಕರನಿಗೆ ರಜಾ ದಿನ ಹೊರತುಪಡಿಸಿ ಕನಿಷ್ಠ 10 ದಿನಗಳ ಕಾಲಾವಕಾಶ ನೀಡಿ ಮೊದಲ ಬಾರಿ ವಿಚಾರಣೆಗೆ ಹಾಜರಾಗಲು  ನೋಟೀಸ್ ನೀಡಬೇಕು. ನಂತರದ ವಿಚಾರಣಾ ದಿನಾಂಕಗಳನ್ನು ಆಯಾ ದಿನದ ವಿಚಾರಣೆಯ ಕೊನೆಯಲ್ಲಿ ತಿಳಿಸುವುದರಿಂದ ಪ್ರತ್ಯೇಕವಾಗಿ ನೋಟೀಸ್ ನೀಡುವ ಅಗತ್ಯವಿರುವುದಿಲ್ಲ.

ಸಿ.ಸಿ.ಎ. ನಿಯಮ 11((8) ರನ್ವಯ ಆರೋಪಿ ನೌಕರನಿಗೆ ವಿಚಾರಣೆ ಸಂದರ್ಭದಲ್ಲಿ ವಿಚಾರಣೆ ಸಹಾಯಕರನ್ನಾಗಿ ಯಾವುದೇ ಸರ್ಕಾರಿ ನೌಕರನ್ನಾಗಲೀ ಅಥವಾ ನಿವೃತ್ತ ಸರ್ಕಾರಿ ನೌಕರನನ್ನಾಗಲೀ ನೇಮಕ ಮಾಡಿಕೊಳ್ಳಲು ವಿಚಾರಣಾಧಿಕಾರಿಗಳು ಅನುಮತಿ ನೀಡಬಹುದು. ಮಂಡನಾಧಿಕಾರಿಯು ಕಾನೂನು ಪದವೀಧರರರಾಗಿದ್ದಲ್ಲಿ ವಕೀಲರನ್ನು ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಲು ಸಂದರ್ಭಾನುಸಾರ ಅವಕಾಶ ನೀಡಬಹುದಾಗಿದೆ. ಆರೋಪಿ ನೌಕರನು ವಿಚಾರಣೆಯ ಆರಂಭದಲ್ಲಿ ಆತನ ಮೇಲಿನ ಯಾವ ಯಾವ ಆರೋಪಗಳನ್ನು ನಿರಾಕರಿಸುತ್ತಾನೋ ಅಂತಹ ಆರೋಪಗಳ ಬಗ್ಗೆ ಮಾತ್ರ ವಿಚಾರಣೆ ನಡೆಸಬಹುದಾಗಿದೆ.

ನಿಗದಿತ ವಿಚಾರಣೆ ದಿನಾಂಕದಂದು ಆರೋಪಿ ನೌಕರನು ವಿಚಾರಣೆಗೆ ಗೈರು ಹಾಜರಾದರೆ, ವಿಚಾರಣೆಗೆ ಹಾಜರಾಗಲು ನಿರಾಕರಿಸಿದರೆ, ಅಥವಾ ಅಹವಾಲು ಸಲ್ಲಿಸಲು ನಿರಾಕರಿಸಿದರೆ, ವಿಚಾರಣಾಧಿಕಾರಿಯು, ಮಂಡನಾಧಿಕಾರಿಗೆ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸಲು ಆದೇಶಿಸಬಹುದು ಹಾಗೂ ಆರೋಪಿ ನೌಕರನಿಗೆ ಪ್ರತಿರಕ್ಷಣೆಗೆ ಸಿದ್ಧವಾಗುವ ಸಲುವಾಗಿ ವಿಚಾರಣೆಯನ್ನು 30 ದಿನಗಳಿಗೆ ಮೀರದಂತೆ ಮುಂದೂಡಬಹುದು. ಮಂಡನಾಧಿಕಾರಿಯು ಈಗಾಗಲೇ ಆರೋಪಿ ನೌಕರನಿಗೆ ಜಾರಿ ಮಾಡಲಾಗಿರುವ ದಾಖಲೆಗಳ ಹೊರತಾಗಿ ನ್ಯಾಯಯುತ ವಿಚಾರಣೆ ಸಲುವಾಗಿ ಹೆಚ್ಚಿನ ದಾಖಲೆಗಳು ಲಭ್ಯವಿದ್ದಲ್ಲಿ ಅಂತಹ ದಾಖಲೆಗಳನ್ನು ವಿಚಾರಣಾಧಿಕಾರಿಗಳ ಮುಂದೆ ಹಾಜರುಪಡಿಸಬಹುದು. ವಿಚಾರಣಾ ಪ್ರಾಧಿಕಾರಿಯು ಅಂಥ ದಾಖಲೆಗಳನ್ನು ಅಂಗೀಕರಿಸುವ ಬಗ್ಗೆ ತನ್ನ ನಿರ್ಣಯವನ್ನು ದಾಖಲಿಸಬೇಕು ಹಾಗೂ ಅಂತಹ ದಾಖಲೆಗಳ ಪ್ರತಿಯನ್ನು ಆರೋಪಿ ನೌಕರನಿಗೆ ಒದಗಿಸಬೇಕು.

ಮಂಡನಾಧಿಕಾರಿಯು ಶಿಸ್ತು ಪ್ರಾಧಿಕಾರಿಯ ಪರವಾಗಿ ಸಾಕ್ಷಿಗಳನ್ನು ಪಾಟೀ ಸವಾಲಿಗೊಳಪಡಿಸಬಹುದು. ಅದೇ ರೀತಿ ಸರ್ಕಾರಿ ನೌಕರನು ಸಹ ಸಾಕ್ಷಿಗಳನ್ನು ಪಾಟಿ ಸವಾಲಿಗೊಳಪಡಿಸಬಹುದು. ವಿಚಾರಣಾಧಿಕಾರಿಗಳ ಅನುಮತಿಯೊಂದಿಗೆ ಮಂಡನಾಧಿಕಾರಿಯು ಸಾಕ್ಷಿಗಳನ್ನು ಪುನರ್ ಪಾಟೀ ಸವಾಲಿಗೊಳಪಡಿಸಬಹುದು ಆದರೆ ದೋಷಾರೋಪಣಾ ಪಟ್ಟಿಯಲ್ಲಿರುವ ವಿಷಯದ  ಹೊರತಾದ ಹೊಸ ವಿಷಯಗಳ ಬಗ್ಗೆ ಪಾಟೀಸವಾಲು ಕೈಗೊಳ್ಳುವಂತಿಲ್ಲ. ಪಾಟೀಸವಾಲಿನ ನಂತರ ವಿಚಾರಣೆಯನ್ನು ಪೂರ್ಣಗೊಳಿಸುವ ಪೂರ್ವದಲ್ಲಿ ಆರೋಪಿ ನೌಕರಿಗೆ ತನ್ನ ಪರವಾಗಿ ಸಾಕ್ಷಿಗಳಿದ್ದಲ್ಲಿ ಹಾಜರುಪಡಿಸಲು ಹಾಗೂ  ಮೌಖಿಕ ಅಥವಾ ಲಿಖಿತ ಪ್ರತಿರಕ್ಷಣಾ ಹೇಳಿಕೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು.

ಸಿ.ಸಿ.ಎ.ನಿಯಮ 11(20) ರನ್ವಯ ಆರೋಪಿ ನೌಕರನಿಗೆ ಸಾಕಷ್ಟು ಅವಕಾಶ ನೀಡಿದಾಗ್ಯೂ ಆತನು ವಿಚಾರಣೆಗೆ ಹಾಜರಾಗದಿದ್ದಲ್ಲಿ ಅಥವಾ ಲಿಖಿತ ಪ್ರತಿರಕ್ಷಣಾ ಹೇಳಿಕೆ ಸಲ್ಲಿಸಲು ವಿಫಲನಾದಲ್ಲಿ ವಿಚಾರಣಾಧಿಕಾರಿಯು ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಏಕಪಕ್ಷೀಯವಾಗಿ ತನ್ನ ನಿರ್ಣಯವನ್ನು ದಾಖಲಿಸಿ ಶಿಸ್ತು ಪ್ರಾಧಿಕಾರಿಗೆ ವರದಿ ಸಲ್ಲಿಸಬಹುದು.

ವಿಚಾರಣಾ ಪ್ರಾಧಿಕಾರಿಯು ಸಿ.ಸಿ.ಎ.ನಿಯಮ 11(23) ರಲ್ಲಿ ವಿವರಿಸಿರುವಂತೆ ಕ್ರಮಬದ್ಧವಾದ ವಿಚಾರಣಾ ವರದಿಯನ್ನು ಸಲ್ಲಿಸಬೇಕು. ಸದರಿ ವರದಿಯಲ್ಲಿ (1) ದೋಷಾರೋಪಣಾ ಪಟ್ಟಿ (2) ದೋಷಾರೋಪಣಾ ಪಟ್ಟಿಗೆ ಆರೋಪಿ ನೌಕರನು ಸಲ್ಲಿಸಿರುವ ಪ್ರತಿರಕ್ಷಣಾ ಹೇಳಿಕೆ (3) ಪ್ರತಿ ಆರೋಪಕ್ಕೆ ಸಂಬಂಧಿಸಿದಂತೆ ಆಧಾರಗಳ ಪರಿಶೀಲನೆಯ ವರದಿ (4) ವಿಚಾರಣಾ ಸಂದರ್ಭದಲ್ಲಿ ಹಾಜರುಪಡಿಸಲಾದ ಮೌಖಿಕ ಹಾಗೂ ಆಧಾರ ಸಹಿತ ದಾಖಲೆಗಳು (5) ವಿಚಾರಣೆ ಸಂದರ್ಭದಲ್ಲಿ ಮಂಡನಾಧಿಕಾರಿ, ಸಾಕ್ಷಿಗಳು ಹಾಗೂ ಆರೋಪಿ ನೌಕರ  ಇವರು ಸಲ್ಲಿಸಿರುವ ಲಿಖಿತ ಹೇಳಿಕೆಗಳು (6) ವಿಚಾರಣೆಗೆ ಸಂಬಂಧಿಸಿದಂತೆ ಶಿಸ್ತು ಪ್ರಾಧಿಕಾರಿಯು ಮಾಡಿರುವ ಯಾವುದೇ ಆದೇಶಗಳಿದ್ದಲ್ಲಿ ಅದರ ಪ್ರತಿಗಳು. (7) ವಿಚಾರಣೆ ದಿನ ನಡೆದ ನಡವಳಿಗಳು(ಛಿಚಿಜ ಜಚಿಡಿಥಿ) (8)ವಿಚಾರಣಾಧಿಕಾರಿಯಿಂದ ಪ್ರತಿ ಆರೋಪಕ್ಕೆ ಸಂಬಂಧಿಸಿದಂತೆ ಹೊರಹೊಮ್ಮುವ ನಿರ್ಣಯಗಳು (9) ವಿಚಾರಣಾ ವರದಿ ಮುಕ್ತಾಯ ಹಂತದಲ್ಲಿ ಎಲ್ಲಾ ಆರೋಪಗಳನ್ನು ಒಳಗೊಂಡಂತೆ ವಿಚಾರಣಾಧಿಕಾರಿಯ ಸ್ಪಷ್ಟ ನಿರ್ಣಯ, ಇವು ಅಡಕವಾಗಿರಬೇಕು. ಶಿಸ್ತು ಪ್ರಕರಣವು ದಂಡನೆಯಲ್ಲಿ ಪರ್ಯವಸಾನಗೊಂಡು ಸದರಿ ದಂಡನಾದೇಶವು ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟ ಸಂದರ್ಭದಲ್ಲಿ ಈ ಮೇಲಿನ ಎಲ್ಲಾ ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ.

ಸಿ.ಸಿ.ಎ.ನಿಯಮ 11-ಎ: ವಿಚಾರಣಾ ವರದಿಯ ಮೇಲೆ ಕ್ರಮ. ಸಿ.ಸಿ.ಎ.ನಿಯಮ 11-ಎ ರನ್ವಯ ವಿಚಾರಣಾಧಿಕಾರಿಯು ಸಲ್ಲಿಸಿರುವ ವಿಚಾರಣಾ ವರದಿಯನ್ನು ಶಿಸ್ತು ಪ್ರಾಧಿಕಾರಿಯು ಪರಿಶೀಲನೆಯ ನಂತರ ನಿರ್ದಿಷ್ಟ ಆರೋಪ ಮೇಲೆ ಅಥವಾ ವಿಚಾರಣಾ ಹಂತದಲ್ಲಿ ವಿಚಾರಣಾ ಪ್ರಕ್ರಿಯೆಯು ನ್ಯಾಯದ ದೃಷ್ಟಿಯಿಂದ ಸಮಂಜಸವಾಗಿ ನಡೆದಿಲ್ಲವೆಂದು ನಿರ್ಣಯಕ್ಕೆ ಬಂದಲ್ಲಿ ಅಂತಹ ಅಂಶಗಳನ್ನು ದಾಖಲಿಸಿ ಸಿ.ಸಿ.ಎ. ನಿಯಮ 11 ರನ್ವಯ ಮರು ವಿಚಾರಣೆ ಮಾಡಲು ವಿಚಾರಣಾಧಿಕಾರಿಗಳಿಗೆ ಹಿಂದಿರುಗಿಸಬಹುದು ಅಥವಾ ಸಿ.ಸಿ.ಎ. ನಿಯಮ 11ಎ(2) ರನ್ವಯ ವಿಚಾರಣಾಧಿಕಾರಿಗಳ ವರದಿಯನ್ನು ಶಿಸ್ತುಪ್ರಾಧಿಕಾರಿಯು ಒಪ್ಪಿಕೊಳ್ಳದಿದ್ದ ಪಕ್ಷದಲ್ಲಿ ಶಿಸ್ತು ಪ್ರಾಧಿಕಾರಿಯು ನಿರ್ದಿಷ್ಟ ಕಾರಣಗಳನ್ನು ನಮೂದಿಸಿ ಅಂತಹ ಅಂಶಗಳ ಮೇಲೆ ತಾನೇ ಸ್ವತ: ವಿಚಾರಣೆ ನಡೆಸಿ ಆರೋಪದ ತೀವ್ರತೆಯನುಸಾರ ಸೂಕ್ತ ದಂಡನೆಯನ್ನು ವಿಧಿಸಬಹುದಾಗಿದೆ. ಆದರೆ ಅಂತಹ ಸಂದರ್ಭದಲ್ಲಿ ಶಿಸ್ತು ಪ್ರಾಧಿಕಾರಿಯು ವಿಚಾರಣಾಧಿಕಾರಿಯ ವರದಿಯ ಮೇಲಿನ ತನ್ನ ನಿರ್ಣಯವನ್ನು ಆರೋಪಿ ನೌಕರನಿಗೆ ಜಾರಿ ಮಾಡಿ ಆತನಿಂದ ಲಿಖಿತ ವಿವರಣೆ ಪಡೆದು, ಸಂದರ್ಭಾನುಸಾರ ಖುದ್ದಾಗಿ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಿ ಆರೋಪಿ ನೌಕರನಿಗೆ ಆತನ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿ ರಕ್ಷಣೆಗೆ ನ್ಯಾಯಯುತ ಅವಕಾಶ ಕಲ್ಪಿಸದ ಹೊರತು ದಂಡನೆ ವಿಧಿಸುವುದು ಸೂಕ್ತವಲ್ಲ